ಸತ್ತರೂ ಸೂತಕ ಇಲ್ಲದ ಗೆಳೆಯ…

ಕಾಲೇಜಿನ ನನ್ನ ಗೆಳೆಯನೊಬ್ಬ ದುಬೈನಲ್ಲಿ ಕೆಲಸಮಾಡುತ್ತಿದ್ದ. ಅವನು ಭಾರತಕ್ಕೆ ಬಂದಿದ್ದಾನೆಂದು ನನಗೆ ಸುದ್ದಿ ಸಿಕ್ಕಿತು. ನನ್ನ ಬಳಿ ಅವನ ಫೋನ್ ನಂಬರ್ ಇರಲಿಲ್ಲ… ನನ್ನ ಇನ್ನೊಬ್ಬ ಕಾಲೇಜಿನ ಗೆಳೆಯನಿಗೆ ಫೋನ್ ಮಾಡಿ ಅವನ ನಂಬರ್ ಕೇಳಿದೆ…

ಅವನು ” ಅವನ ಬಗ್ಗೆ ನನ್ನ ಹತ್ತಿರ ಏನೂ ಕೇಳಬೇಡ ” ಎಂದ…
” ಯಾಕೆ…  ಏನಾಯ್ತು… ” ಅಂತ ಕೇಳಿದೆ ಅವನಿಗೆ…
” ಅವನು ಸತ್ತರೆ ನನಗೇನು ಸೂತಕ ಇದೆಯಾ ? ” ಅವನು ನನಗೆ ಮರುಪ್ರಶ್ನೆ ಕೇಳಿಬಿಟ್ಟ… ಮಾತು ಕಠೋರವಾಗಿದ್ದರೂ…  ಅವನಿಗೆ ಆ ದುಬೈ ಗೆಳೆಯನಿಂದ ಯಾವುದೊ ವಿಷಯದಲ್ಲಿ ತುಂಬಾ ನೋವಾಗಿದೆ ಎಂಬುದು ಅವನ ಮಾತಿನ ಶೈಲಿಯಲ್ಲಿ ಎದ್ದು ತೋರುತ್ತಿತ್ತು…

” ಯಾಕೋ ? ಕಾಲೇಜಲ್ಲಿ ಒಟ್ಟಿಗೆ ಇದ್ದೋರಲ್ವಾ  ನೀವು… ? ಒಟ್ಟಿಗೆ ಎಣ್ಣೆ ಹಾಕ್ತಿದ್ರೀ …  ಈಗ ಏನಾಯ್ತು ? ”  ಮತ್ತೆ ಕೇಳಿ ಬಿಟ್ಟಿದ್ದೆ…
ಆಗಲೇ ಅವನು ತನ್ನ ನೋವು ತೋಡಿಕೊಳ್ಳಲು ಶುರು ಮಾಡಿದ್ದ…
” ದುಬೈ ಹೋದ ಮೇಲೆ ಅದೆಷ್ಟೋ ಸಲ ಅವನು ಊರಿಗೆ ಬಂದ… ಸಿಕ್ಕಿದ ಕೂಡ…  ನಾನು ಎಷ್ಟೋ ಸಲ ಕರೆದೆ…  ಬಾ ಎಣ್ಣೆ ಪಾರ್ಟಿ ಮಾದ್ವ ಒಮ್ಮೆ… ಅಂತ… ಬರ್ತೇನೆ ಬರ್ತೇನೆ ಹೇಳುತ್ತಾ … ಒಂದು ಸಲ ಸಿಗಲಿಲ್ಲ… “

ಅವನು ಮಾತು  ಮುಂದುವರಿಸಿದ್ದ…
” ಕಳೆದ ವರ್ಷ ಬಂದಾಗ ಏನು ಮಾಡಿದ ಗೊತ್ತಾ…. ಮತ್ತೆ ನಾನು ಮತ್ತು ನನ್ನ ಕೆಲವು ಗೆಳೆಯರು ಪಾರ್ಟಿಗೆ ಕರೆದೆ… ಬರುತ್ತೇನೆ ಅಂದವ ಬಂದ… ಬಂದು ತುಂಬಾ ಬ್ಯುಸಿ ಇದ್ದವರಂತೆ ನಾಟಕ ಆಡಿ… ‘ಮಗಾ … ನೀವು ಪಾರ್ಟಿ ಮಾಡಿ…. ಅದರ ಬಿಲ್ ನಾನು ಈಗಲೇ ಕೊಟ್ಟು ಹೋಗುತ್ತೇನೆ.. ನನಗೆ ಪಾರ್ಟಿಲಿ ಇರೋಕಾಗಲ್ಲ’ ಅಂದ…. ಎಷ್ಟು ಕೊಬ್ಬು ಅವನಿಗೆ… ನಾವೇನು ದುಡ್ಡಿಲ್ಲದೆ ಇವನಿಗೆ ಪಾರ್ಟಿಗೆ ಕರೆದೇವಾ ? ನಾವೂ ಇವನಷ್ಟೇ ಅರ್ನ್ ಮಾಡುತ್ತೇವೆ … ನಾವೇನು ಬಿಕಾರಿಗಳಾ ? ಸುಮ್ನೆ ನನ್ನ ಫ್ರೆಂಡ್ಸ್ ಎದುರು ಮರ್ಯಾದೆ ಹೋಯಿತು … ‘ ನೀನೇನೂ ಬಿಲ್ ಕೊಡುವುದು ಬೇಡ ನೀನು ಹೊರಡು ‘ ಅಂತ ಅವನ ಕಳುಹಿಸಿಬಿಟ್ಟೆ … ಅವತ್ತಿಂದ ನಾನು ಅವನ ಸುದ್ದಿಗೆ ಹೋಗಿಲ್ಲ… ಅವನ ಈಗಿನ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ… ” ಎಂದು ನಡೆದ ಘಟನೆ ಹೇಳಿದ…  

” ಏನೋ ಪ್ರಾಬ್ಲಮ್ ಇರಬಹುದು…  ಬಿಡೋ… ನಿನಗೂ ಇಲ್ಲ ಹೇಳೋಕೆ ಆಗದೆ ಹಾಗಾಗಿರಬಹುದು… ” ಎನ್ನುತ್ತಾ ಸಮಾಧಾನ ಮಾಡಲು ನೋಡಿದೆ…

” ಏನ್ ಪ್ರಾಬ್ಲಮ್ ಇಲ್ಲ ಬಿಡು  …  ದುರಹಂಕಾರ ಅವನಿಗೆ… ” ಎಂಬ ಉತ್ತರ ಬಂತು…

ಇಲ್ಲಿ ತಪ್ಪು ಯಾರದ್ದು… ? ಆ ಕೋಪ ನಿಜವಾದ ಕೋಪವೋ ಅಥವಾ ಗೆಳೆತನದಲ್ಲಿ ಬರುವ ತಾತ್ಕಾರಿಕ ಕೋಪವೋ … ? ನಿಜಕ್ಕೂ ಅದು ದುರಹಂಕಾರವೇ ಆಗಿತ್ತೇ ?  ಆ ಸಮಯದಲ್ಲಿ  ಅರ್ಥವಾಗಲಿಲ್ಲ… !

 ಆದರೆ ಇನ್ನೂ ಕೆಲವು   ಪ್ರಶ್ನೆಗಳು ಮಾತ್ರ ಹುಟ್ಟಿಕೊಂಡಿದ್ದವು … ಈ ” ಎಣ್ಣೆ ” ಎದುರಿಗೆ ಸಿಕ್ಕ ಗೆಳೆಯ ನಿಜವಾದ ಗೆಳೆಯನೇ…. ?  “, ಎಣ್ಣೆ ಪಾರ್ಟಿ ಇದ್ದರೆ ಮಾತ್ರ ಗೆಳೆತನ ವನ್ನು ಮೆರೆಯಬಹುದೇ ? ” ಎಂಬುದು… ಈ “ಎಣ್ಣೆ ” ಎಂಬುದು ಇದ್ದಲ್ಲೇ ತುಂಬಾ ಗೆಳೆಯರು ಸೇರುವುದನ್ನ ನನ್ನ ನೋಡಿದ್ದೇ.. ಕೇಳಿದ್ದೆ… ! ಈ ” ಎಣ್ಣೆ ” ಸಿಗುತ್ತದೆ ಎಂತಲೇ ಕೆಲವರು ಕೆಲವರ ಗೆಳೆಯರಾಗಿರುತ್ತಾರೆ… ಈ ” ಎಣ್ಣೆ ” ಸಿಗುವಷ್ಟು ಹೊತ್ತು ಮಾತ್ರ ಗೆಳೆಯರಾಗಿರುತ್ತಾರೆ … ಇನ್ನು ಕೆಲವು ಕಡೆ ” ಎಣ್ಣೆ ” ಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ಗೆಳೆತನದ ಆಳ ಹೆಚ್ಚಾಗಿ… ಪ್ರಭಾವ ಇಳಿದಾಗ ಸಾಮಾನ್ಯ ಎನಿಸುವುದನ್ನೂ ನಾವು ನೋಡುತ್ತೇವೆ…

ಗೆಳೆತನ ಎಂದ ಕೂಡಲೇ ನಮಗೆ ನೆನಪಾಗುವುದು,  ಶ್ರೀ ಕೃಷ್ಣ ಮತ್ತು ಸುಧಾಮರ ಗೆಳೆತನ… ಅಲ್ಲಿ ಈ ” ಎಣ್ಣೆ ” ಇರಲಿಲ್ಲ…. ಒಂದು ಹಿಡಿ ಅವಲಕ್ಕಿ ಇತ್ತು… ಆ ಅವಲಕ್ಕಿಯಲ್ಲಿ ಗೆಳೆತನದ ಪ್ರೀತಿ ತುಂಬಿ ತುಳುಕುತ್ತಿತ್ತು… ಆ ಅವಲಕ್ಕಿ ಯ ಸ್ಥಾನವನ್ನು ಈ ” ಎಣ್ಣೆ ” ತುಂಬಲು ಸಾಧ್ಯವಿಲ್ಲ. ಏಕೆಂದರೆ ಆ ಅವಲಕ್ಕಿ ಹಿಡಿದು ಬಂದವ ತನ್ನಿಂದಾಗಿ ತನ್ನ ಗೆಳೆಯನ ಗೌರವಕ್ಕೆ ದಕ್ಕೆ ಬಂದೀತೆ ? ಎಂಬ ಅಳುಕು , ಭಯ ದೊಂದಿಗೆ ತನ್ನ ಗೆಳೆಯನ ಹಿತದ  ಬಗ್ಗೆಯೇ ಯೋಚಿಸುತ್ತಿದ್ದರೆ… ಇನ್ನೊಂದೆಡೆ ತನ್ನ ಗೆಳೆಯ ತಂದ ಆ ಹಿಡಿ ಅವಲಕ್ಕಿಯನ್ನು ತನ್ನ ಪ್ರೀತಿಯ ಮಡದಿಗೂ ನೀಡಲು ಹಿಂಜರಿಯುವಷ್ಟು ಇಷ್ಟಪಟ್ಟು , ಅಮೃತ ಎಂಬಂತೆ  ಸವಿದೇ ಬಿಟ್ಟಿದ್ದ … ತನ್ನ ಗೆಳೆಯನ ಕಷ್ಟಗಳನ್ನು ಅವನ ಬಾಯಲ್ಲಿ ಕೇಳದೆ, ತಾನೇ   ಅರಿತು ಅವನ ಎಲ್ಲ ಕಷ್ಟಗಳನ್ನು ದೂರ ಮಾಡಿದ್ದ… ಈ ಪರಸ್ಪರ ಅರಿತು ಹಿತ ಬಯಸುವುದೇ  ಗೆಳೆತನ ಅಲ್ಲವೇ ?



ಇಂದಿನ ನಮ್ಮ ನಡುವಿನ ಈ ” ಎಣ್ಣೆ ” ಗೆಳೆತನ, ಗೆಳೆಯರ ನಡುವೆ ಅವರವರ ಸಮಸ್ಯೆಗಳನ್ನು ಅರಿತುಕೊಳ್ಳುತ್ತದೋ …. ಭಾವನೆಗಳನ್ನು ಗೌರವಿಸುತ್ತದೆಯೋ … ಪರಸ್ಪರ ಅವರವರ ಕಷ್ಟಗಳನ್ನು  ದೂರ ಮಾಡಿಸುವ  ಮನೋಭಾವ ಹೊಂದಿದೆಯೋ ಗೊತ್ತಿಲ್ಲ … ಆದರೆ ಈ ಬಗ್ಗೆ ಯೋಚಿಸುತ್ತಿದ್ದ ನನಗೆ ಒಂದು ವಿಚಾರ ತಲೆಯಲ್ಲಿ ಮಿಂಚಿ ಹೋಯಿತು… ಈ ” ಎಣ್ಣೆ ” ಗೆ ಪ್ರಜಾ ಪ್ರಭುತ್ವವನ್ನು ಖರೀದಿಸುವ ಶಕ್ತಿಯೇ ಇರುವುದನ್ನು ಚುನಾವಣಾ ಸಮಯದಲ್ಲಿ ನಾವು ನೋಡುತ್ತಾ ಇರುತ್ತೇವೆ … ಹೀಗಿರುವಾಗ ಗೆಳೆತನವನ್ನು ಬೀಳಿಸುವ ಅಥವಾ ಗಟ್ಟಿಯಾಗಿಸುವ ಶಕ್ತಿ ಈ  ” ಎಣ್ಣೆ ” ಗೆ  ಇಲ್ಲದೆ ಹೋದೀತೇ ?  ಎಂಬುದು..

ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್

Founder & Creative Head
Grapito Desings (Design and Marketing agency)

Leave a Reply

Your email address will not be published. Required fields are marked *